Sunday 18 March 2012

ಆರ್ದ್ರ ಹೃದಯಿ

ನಮ್ಮದು ಹಳ್ಳಿ ಮನೆ. ಆಗ ಫ್ರಿಜ್ ಇರಲಿಲ್ಲ. ನಿನ್ನೆಯ ಅಡುಗೆ ಕುದಿಸಿಟ್ಟದ್ದು ಮರುದಿನಕ್ಕೆ ಹಳಸದಿದ್ದರೆ ಬಳಸುತ್ತಿದ್ದೆವು. ಮತ್ತೂ ಉಳಿದದ್ದನ್ನು ದನಕ್ಕೆ  ಕೊಡುವ ಅಕ್ಕಚ್ಚಿಗೆ ಹಾಕುತ್ತಿದ್ದೆವು.

ಮನೆಯ ಹಾಗೂ ತೋಟದ ಕೆಲಸಕ್ಕೆ ಹತ್ತಕ್ಕೂ ಹೆಚ್ಚು ಕೆಲಸದಾಳುಗಳು ಇದ್ದರು. ಅದಲ್ಲಿ ಮಹಿಳೆಯರೂ ಇದ್ದರು. ಮನೆ ಗುಡಿಸಿ, ವರೆಸಿ, ಪಾತ್ರೆ ತೊಳೆದು, ಬಟ್ಟೆ ತೊಳೆದು, ದನಗಳಿಗೆ ಹುಲ್ಲು ತಂದು ಉಳಿದ ಸಮಯದಲ್ಲಿ ಕೃಷಿ ಕೆಲಸದಲ್ಲಿ ತೊಡಗುತ್ತಿದ್ದರು. 
ಅವರಲ್ಲಿ ಕೆಲವರು ಬಸುರಿಯರು, ಇನ್ನು ಕೆಲವರು ಪುಟ್ಟು ಮಕ್ಕಳ ಅಮ್ಮಂದಿರೂ ಇರುತ್ತಿದ್ದರು. 

ಹಾಗಿರುವ ಸಮಯದಲ್ಲಿ ನಮ್ಮಲ್ಲಿ ನಿನ್ನೆಯ ಅಡುಗೆ ಹೆಚ್ಚು ಉಳಿಯುತ್ತಿರಲಿಲ್ಲ. ಅಮ್ಮ ಹೆಚ್ಚಿನ ದಿನಗಳಲ್ಲಿ ಅವರಿಗೆ ಅಡುಗೆ ಕೊಡುತ್ತಿದ್ದರು. ಉಳಿದದ್ದೇ ಆದರೂ ತರಕಾರಿ ಬೇಳೆ ಹಾಕಿದ ಹುಳಿ ಅವರ ಈಗಿನ ಆರೋಗ್ಯಕ್ಕೆ ಅವಶ್ಯಕ ಎಂಬುದು ಅಮ್ಮನ ಧೋರಣೆ. ತೆಗೆದುಕೊಂಡ ಪಾತ್ರೆ ಮರುದಿನ ಕಡ್ಡಾಯವಾಗಿ ತರಬೇಕು ಎಂಬ ನಿಲುವು ಆಕೆ ಸಡಿಲಿಸುತ್ತಿರಲಿಲ್ಲ!  ಯಾಕೆಂದರೆ  ಆ  ದಿನವೂ ಮಜ್ಜಿಗೆಯೋ ಸಾರೋ ಏನೋ ಕೊಡುವ ಯೋಚನೆ ಆಕೆಗಿರುತ್ತಿತ್ತು. 

ನನ್ನ ಪ್ರೀತಿಯ ಬೆಂಡೆಕಾಯಿ ಸಾರು ಮಾಡಿದರೆ ಎರಡೂ ದಿನವೂ ಚಪ್ಪರಿಸಿ ಹೊಡೆಯುತ್ತಿದ್ದೆ. ಒಮ್ಮೆ, ತುಂಬಿದ ಪಾತ್ರೆಯಲ್ಲಿದ್ದ ಉರುಟುರುಟು ಹೂವಿನ ಚಿತ್ತಾರದ ಬೆಂಡೆಕಾಯಿ ಹೋಳುಗಳು ಮರುದಿನ ಇಲ್ಲವಾದ ಸಂಕಟದಲ್ಲಿ 'ಯಾಕೆ ಎಲ್ಲವನ್ನೂ ಕೊಡುತ್ತೀ?!' ಎಂದಾಗ ಪುಟ್ಟ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದು ಮರೆಯಲಾರೆ. 

No comments:

Post a Comment